ವಿಶ್ವಗುರು ಅಣ್ಣ ಬಸವಣ್ಣನವರು ಕ್ರಿ.ಶ. ೧೨ನೆಯ ಶತಮಾನದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ವೈಚಾರಿಕ ಹಾಗೂ ಸಾಂಸ್ಕೃತಿಕ
ಬದಲಾವಣೆಗಳನ್ನು ಮಾಡಿದರು. ಸಮಾಜದ ಏಳಿಗೆಗೆ ಅವಿರತವಾಗಿ ಚಿಂತಿಸಿದರು. ಅವರ ಸಮಾಜೋದ್ಧಾರದ ಚಿಂತನೆಗಳು ಕನ್ನಡ ಭಾಷೆಯಲ್ಲಿ
ವಚನಗಳ ಮೂಲಕ ಅಭಿವ್ಯಕ್ತಗೊಂಡಿವೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರು ವಚನ ರಚನೆಯಲ್ಲಿ ನಿರತರಾದ ಸನ್ನಿವೇಶವು ಇಲ್ಲಿಯ ಚಿತ್ರ-ಉಬ್ಬುಶಿಲ್ಪದ
ಮೂಲಕ ಅಳವಡಿಕೆಗೊಂಡಿದೆ. ಪೃಥ್ವಿಯ ಮೇಲೆ ವಿಶ್ವಚೇತನ ಬಸವಣ್ಣನವರು ತಮ್ಮ ಅನುಭಾವದ ಪ್ರತೀಕವಾದ ವಚನಗಳ ಮೂಲಕ ಜಗದಗಲ
ಬೆಳಕನ್ನು ಪಸರಿಸುತ್ತಿದ್ದಾರೆ. ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ’ ಸೂರ್ಯನ ಕಿರಣಗಳು ಇಡೀ ಜಗತ್ತನ್ನು ಸ್ಪರ್ಶಿಸುವ ರೀತಿಯಲ್ಲಿ ಜ್ಞಾನವೆಂಬ
ಬೆಳಕು ಇಡೀ ಜಗತ್ತನ್ನು ಆವರಿಸುತ್ತಿದೆ.
ಪೃಥ್ವಿಯ ಎಡ ಮತ್ತು ಬಲ ಭಾಗದಲ್ಲಿ ವಚನ ಕಟ್ಟುಗಳ ಉಬ್ಬುಶಿಲ್ಪಗಳಿವೆ. ಸಾಂಕೇತಿಕವಾಗಿ ಎಡ ಮತ್ತು ಬಲ ಭಾಗದಲ್ಲಿ ಬಸವಣ್ಣನವರ
ಎರಡು ವಚನಗಳ ಉಬ್ಬುಶಿಲ್ಪಗಳನ್ನು, ಕುಸುರಿಯಿಂದ ಕೂಡಿದ ತಲೆಬಾಗಿಲುಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಈ ದೃಶ್ಯ ಉತ್ತರ ಕರ್ನಾಟಕದ
ಸಾಂಸ್ಕೃತಿಕ ಜೀವನವನ್ನು ಅನಾವರಣಗೊಳಿಸುತ್ತದೆ.
